ಮನೋಹರ್ ಎಸ್. ಕುಂದರ್ರ ಯಕ್ಷಗಾನ ರಂಗವೈಭವ ಲೋಕಾರ್ಪಣೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಒಕ್ಟೋಬರ್ 6 , 2013
|
ಉಡುಪಿ: ಸರಕಾರಗಳು ತಮ್ಮ ಸಾಂಸ್ಕೃತಿಕ ನೀತಿಯನ್ನು ಘೋಷಿಸಬೇಕು ಹಾಗೂ ಯಕ್ಷಗಾನವನ್ನು ರಾಜ್ಯದ ಸಾಂಕೇತಿಕ ಕಲೆಯಾಗಿ ಸ್ವೀಕರಿಸಬೇಕು ಎಂದು ಯಕ್ಷಗಾನ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಹೇಳಿದರು.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮನೋಹರ್ ಎಸ್. ಕುಂದರ್ ಬಡಾ ಎರ್ಮಾಳು ಅವರ 'ಯಕ್ಷಗಾನ ರಂಗವೈಭವ' ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶನಿವಾರ ಪುಸ್ತಕ ಪರಿಚಯ ಮಾಡಿದರು.
|
ಮನೋಹರ್ ಎಸ್. ಕುಂದರ್
|
35ಕ್ಕೂ ಅಧಿಕ ಮೇಳ, 12,000ಕ್ಕೂ ಅಧಿಕ ಸಂಘ ಹಾಗೂ ನೂರಾರು ಕೋಟಿ ರೂ. ವಾರ್ಷಿಕ ವ್ಯವಹಾರವನ್ನು ನಡೆಸುವ ಯಕ್ಷಗಾನ ಒಂದು ಜೀವಂತ ರಂಗಭೂಮಿ (ಲಿವಿಂಗ್ ಥಿಯೇಟರ್)ಯಾಗಿದೆ. ಕಳೆದ 65 ವರ್ಷಗಳಿಂದ ಹಲವಾರು ಸರಕಾರಗಳು ಬಂದರೂ ಸಾಂಸ್ಕೃತಿಕ ಪಾಲಿಸಿಯನ್ನು ಘೋಷಣೆ ಮಾಡಿಲ್ಲ. ಕನಿಷ್ಠ ಪಕ್ಷ ಸರಕಾರ ಯಾವಕಲೆಯನ್ನು ಪ್ರೋತ್ಸಾಹಿಸುತ್ತದೆ ಎಂಬುದನ್ನಾದರೂ ತಿಳಿಸಬೇಕು. ಕೇರಳದಲ್ಲಿ ಕಥಕ್ಕಳಿಯಿರುವಂತೆ ರಾಜ್ಯದಲ್ಲಿ ಯಕ್ಷಗಾನವನ್ನು ಸಾಂಕೇತಿಕ ಕಲೆಯಾಗಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.
1925-63ರ ಅವಧಿಯಲ್ಲಿ ಯಕ್ಷಗಾನದ ಬಗ್ಗೆ 8-10 ಪುಸ್ತಕಗಳು ಬಿಡುಗಡೆಗೊಂಡಿದ್ದವು. ನಂತರದ 40 ವರ್ಷಗಳಲ್ಲಿ ಸುಮಾರು 300ಕ್ಕೂ ಅಧಿಕ ಗ್ರಂಥಗಳು ಬಿಡುಗಡೆಗೊಂಡಿವೆ. ಇವುಗಳಲ್ಲಿ 200ಕ್ಕೂ ಅಧಿಕ ಶ್ರೇಷ್ಠ ಗ್ರಂಥಗಳಾಗಿವೆ. ಯಕ್ಷಗಾನಕ್ಕೆ ಸಂಬಂಧಪಟ್ಟಂತೆ 27-28ರಷ್ಟು ಪಿಎಚ್ಡಿ ಸಾಧನೆಯಾಗಿದ್ದು ಉತ್ಕೃಷ್ಟ 25ಕ್ಕೂ ಅಧಿಕ ಪಿಎಚ್ಡಿ ಗ್ರಂಥಗಳು ಮೂಡಿಬಂದಿವೆ ಎಂದರು.
ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ, ಅಧ್ಯಯನಶೀಲರಾದ ಛಾಯಾಚಿತ್ರಗಾರ ಮನೋಹರ ಎಸ್. ಕುಂದರ್ ಅವರು ತಮ್ಮ ಸಂಗ್ರಹದ 4 ಲಕ್ಷಕ್ಕೂ ಅಧಿಕ ಯಕ್ಷಗಾನ ಛಾಯಾಚಿತ್ರಗಳಲ್ಲಿ ಉತ್ಕೃಷ್ಟ 390 ಛಾಯಾಚಿತ್ರಗಳನ್ನು ಬಳಸಿಕೊಂಡು ಹೊರ ತಂದಿರುವ ಈ ಮೇರು ಗ್ರಂಥ ಯಕ್ಷಗಾನವನ್ನು ಮನೆಮನಕ್ಕೆ, ದೇಶ ವಿದೇಶಕ್ಕೆ ತಲುಪಿಸುವ ರಾಯಭಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ 'ಯಕ್ಷಗಾನ ರಂಗವೈಭವ 'ಕೃತಿಯನ್ನು ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿಗಳಾದ ಡಾ. ಕೋಳ್ಯೂರು ರಾಮಚಂದ್ರ ರಾವ್ ಹಾಗೂ ಮಾರ್ಗೋಳಿ ಗೋವಿಂದ ಸೇರಿಗಾರ್ ಜತೆಯಾಗಿ ಬಿಡುಗಡೆ ಮಾಡಿದರು. ಈ ಇಬ್ಬರು ಕಲಾವಿದರಿಗೆ ಹಾಗೂ ಗ್ರಂಥದಲ್ಲಿ ಆಂಗ್ಲ ತರ್ಜುಮೆ ನಡೆಸಿ ಸಹಕರಿಸಿದ ನಿವೃತ್ತ ಪ್ರಾಧ್ಯಾಪಕ ಎನ್.ಟಿ. ಭಟ್ ಅವರಿಗೆ ಸನ್ಮಾನ ನಡೆಯಿತು.
ಎಂಜಿಎಂ ಕಾಲೇಜಿನ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಚ್. ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದು, ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಹಾ.ಲ. ನಾಕ್, ದ.ಕ. ಎಸ್ಕೆಪಿಎ ಅಧ್ಯಕ್ಷ ವಾಸುದೇವ ರಾವ್, ಹಿರಿಯ ಪತ್ರಕರ್ತ ಡಾ. ಕೆ.ಎಂ. ನಂಬಿಯಾರ್, ಮಾಜಿ ಶಾಸಕ ಲಾಲಾಜಿ ಮೆಂಡನ್ಉಪಸ್ಥಿತರಿದ್ದರು. ಗ್ರಂಥಕರ್ತ ಮನೋಹರ್ ಎಸ್. ಕುಂದರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕಿ ಕಾತ್ಯಾಯಿನಿ ಕುಂಜಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಸಮಾರ೦ಭದ ಕೆಲವು ಫೋಟೊಗಳು ( ಕೃಪೆ : www.gulfkannadiga.com )
ಕೃಪೆ : http://www.vijaykarnataka.com
|
|
|